ಚಿತ್ರ ಮಾಧ್ಯಮ ಸಂಸ್ಥೆಯ ಮೂಲಕ ಆರ್. ಮಲ್ಲಿಕಾರ್ಜುನಯ್ಯ (ಆರ್.ಟಿ.ಓ. ಶಿವಣ್ಣ), ಕೆ.ಎನ್. ವೆಂಕಟೇಶ್ ನಿರ್ಮಿಸುತ್ತಿರುವ ಶ್ರಾವಣ ಚಿತ್ರ ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿ ಹಾಡೊಂದರ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಶ್ರೀ ಚಾಮುಂಡೇಶ್ವರಿ ಧ್ವನಿಗ್ರಹಣ ಕೇಂದ್ರದಲ್ಲಿ ಮಾತುಗಳ ಮರುಲೇಪನ ಕಾರ್ಯವನ್ನು ೯ ದಿನಗಳ ಕಾಲ ನಡೆಸಿ ಕಳೆದ ಶುಕ್ರವಾರ ಮುಕ್ತಾಯಗೊಳಿಸಿದ್ದು, ಸದ್ಯದಲ್ಲೇ ರೀರೆಕಾರ್ಡಿಂಗ್ ಕಾರ್ಯ ಪ್ರಾರಂಭಿಸಲಿದೆ. ತುಮಕೂರು ಸುತ್ತಮುತ್ತ ೯೦% ನಿರಂತರ ಚಿತ್ರೀಕರಣ ಮಾಡಿ ಮುಗಿಸಿರುವ ಚಿತ್ರತಂಡ ಕವ್ವಾಲಿ ಶೈಲಿಯ ಹಾಡೊಂದರ ಚಿತ್ರೀಕರಣವನ್ನು ಮಾತ್ರ ಉಳಿಸಿಕೊಂಡಿದ್ದು, ಸದ್ಯದಲ್ಲೇ ಅದರ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ದೇಶಕ ಬಿ.ಎಸ್. ರಾಜಶೇಖರ್ ತಿಳಿಸಿದ್ದಾರೆ. ನಿರುದ್ಯೋಗಿಗಳಾದ ಮೂವರು ಯುವಕರ ಜೀವನಕ್ಕೆ, ಅವರ ಕನಸುಗಳಿಗೆ ನಿಜವಾದ ಅರ್ಥ ಕೊಡುವ ನಾಯಕಿ ಅವರಿಗೆ ದಾರಿದೀಪವಾಗುತ್ತಾಳೆ. ಅವರ ಜೀವನದ ದಾರಿಗೆ ದಾರಿದೀಪವಾಗಿ ಶ್ರಾವಣದ ತಂಗಾಳಿ ಬೀಸುತ್ತಾಳೆ. ತಮಿಳಿನಲ್ಲಿ ಸೀತಾವತಿ ಅವರು ಬರೆದ ಕಥೆಯನ್ನು ಕನ್ನಡಕ್ಕೆ ಭಾಷಾಂತರ ಮಾಡಿಕೊಂಡು ಚಿತ್ರಕಥೆ ಮಾಡಿದ್ದಾರೆ ನಿರ್ದೇಶಕ ರಾಜಶೇಖರ. ದೊಡ್ಡರಂಗೇಗೌಡ, ಬಿ.ಎಸ್. ರಾಜಶೇಖರ್ ಸಾಹಿತ್ಯ ರಚಿಸಿದ್ದಾರೆ. ಕಾರ್ತಿಕ್ ಭೂಪತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ. ವಾಸುದೇವ್ರವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ರವಿಕಿಶೋರ್ ಹಾಗೂ ಸುರೇಶ್ ಚಗಚಗೆರೆ ಸಂಭಾಷಣೆ ಬರೆದಿದ್ದಾರೆ.
ಮೂವರು ನಿರುದ್ಯೋಗಿ ಯುವಕರಾಗಿ ವಿಜಯರಾಘವೇಂದ್ರ, ಭುವನ್, ಸಂದೀಪ್, ನಾಯಕಿ ಪಾತ್ರದಲ್ಲಿ ಗಾಯತ್ರಿ, ಅಲ್ಲದೆ ಬ್ಯಾಂಕ್ ಜನಾರ್ಧನ್, ಚಿದಾನಂದ್, ಮೈಕಲ್ ಮಧು, ಬಿ.ಕೆ. ಶಂಕರ್, ನೀನಾಸಂ ಅಶ್ವತ್ಥ್, ಸತ್ಯಜಿತ್, ರವಿಕುಮಾರ್, ಮಾಲತಿ ಮೈಸೂರು ಮೊದಲಾದವರು ತಾರಾಗಣದಲ್ಲಿದ್ದಾರೆ.